ಜೋಕುಮಾರನ ತೊಟ್ಟಿಲು

>> Tuesday, March 31, 2009

೧) ಟೀಚರ್ ಗುಂಡನಿಗೆ ಚೆನ್ನಾಗಿ ಹೊಡೀತಾ ಇದ್ರು.
ಅಲ್ಲೆ ಬರುತ್ತಿದ್ದ ಪ್ರಿನ್ಸಿಪಾಲ್ : "ಯಾಕ್ರೀ ಅವ್ನಿಗೆ ಹೊಡೀತಾ ಇದ್ದೀರಾ?
ಟೀಚರ್: ಸರ್ ಗಾಂಧಿ ಬಗ್ಗೆ ಪ್ರಬಂಧ ಬರಿ ಅಂದ್ರೆ ಪೂಜಾ ಗಾಂಧಿ ಬಗ್ಗೆ ಬರ್ದಿದ್ದಾನೆ ಸಾರ್!

೨) ಪ್ರಶ್ನೆ: ದೇವರುಗಳು ಯಾಕೆ ಸ್ವರ್ಗ ಲೋಕದಲ್ಲಿರ್ತಾರೆ?
ಉತ್ತರ: ತಾವು ಸೃಷ್ಟಿಸಿದವುಗಳಿಗೆ ಹೆದರಿ!

೩) ಪ್ರಶ್ನೆ : ಬ್ಲೂ ಫಿಲಂ ಅಂದ್ರೆ ಯಾವುದು?
ಉತ್ತರ: ಮನೆಮಂದಿಯೆಲ್ಲಾ ಬೇರೆ ಬೇರೆ ಹೊತ್ತಿಗೆ ಕೂತು ನೋಡುವ ಸಿನಿಮಾ!

೫) ಪ್ರಶ್ನೆ : ನಿಜವಾದ ಭಾರತೀಯ ಯಾರು?
ಉತ್ತರ: ರಾಜೀವ ಗಾಂಧಿ.
ಪ್ರಶ್ನೆ: ಯಾಕೆ?
ಉತ್ತರ: 'ಭಾರತೀಯರೆಲ್ಲಾ ನನ್ನ ಸಹೋದರ ಸಹೋದರಿಯರು' ಅನ್ನುವ ಧ್ಯೇಯ ವಾಕ್ಯವನ್ನು ಪಾಲಿಸಿದ ನಾಯಕ ಅವರು, ಆದ್ದರಿಂದಲೇ ವಿದೇಶಿಯಳನ್ನು ಮದುವೆ ಆದ್ರು!

೬) ಪ್ರಶ್ನೆ: ಗಾಂಧೀಜಿ ಸಾಯೋಕೆ ಮುಂಚೆ ಹೇಗಿದ್ರು ಗೊತ್ತಾ?
ಉತ್ತರ: ಜೀವಂತವಾಗಿ ಇದ್ರು!

೭) ಪ್ರಶ್ನೆ: ಲವ್ ಮಾಡಿ ಮದುವೆ ಆಗೋದು ಒಳ್ಳೆದಾ? ಮದುವೆ ಆಗಿ ಲವ್ ಮಾಡೋದು ಒಳ್ಳೆದಾ?
ಉತ್ತರ : ಮದುವೆ ಆಗಿ ಲವ್ ಮಾಡೋದು ಒಳ್ಳೆದು, ಆದ್ರೆ ಹೆಂಡ್ತಿಗೆ ಗೊತ್ತಾಗ್ಬಾರ್ದು ಅಷ್ಟೆ!

೮) ಪ್ರಶ್ನೆ: ಗರ್ಲ್ ಫ್ರೆಂಡ್ ಅಂದ್ರೆ ಯಾರು?
ಉತ್ತರ: ಯಾವಳು ಒಬ್ಬ ಹುಡುಗನನ್ನು ಒಂದೇ ವರ್ಷದೊಳಗಾಗಿ ಸಂಪೂರ್ಣವಾಗಿ ಬದಲಾಯಿಸುತ್ತಾಳೋ ಮತ್ತು ಒಂದು ವರ್ಷದ ನಂತರ 'ನೀನೀಗ ಮೊದಲಿನಂತಿಲ್ಲ, ತುಂಬಾ ಬದ್ಲಾಗಿದ್ದೀಯ... ಐ ಹೇಟ್ ಯು' ಅನ್ನುತ್ತಾಳೋ ಅವಳು!

Read more...

ಹಬ್ಬದ ಸಂಭ್ರಮದಲ್ಲಿ ಉಪವಾಸ ಬಿದ್ದವನ ಕತೆ...

>> Friday, March 27, 2009

ಇಂದು ಯುಗಾದಿ. ಸ್ನೇಹಿತರು, ಬಂಧುಗಳೆಲ್ಲ ಬೆಳಗ್ಗಿನಿಂದ ಒಂದೇ ಸಮನೆ ಶುಭಾಷಯ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಇನ್ನೂ ಬರುವುದು ನಿಂತಿಲ್ಲ. ನಾನೂ ಹಾಗೆಯೇ, ಸಂದೇಶಗಳನ್ನು ಅವರ ಕರವಾಣಿಗಳಿಗೆ ಕಳುಹಿಸುತ್ತಿದ್ದೇನೆ. ಈ ಹಬ್ಬಗಳ ಸಂಭ್ರಮವೇ ಹಾಗೆ; ಎಲ್ಲರೂ ಖುಷಿ ಪಡುವ ಹಾಗೆ!

ಹಾಗೆ ನೋಡಿದರೆ ನಾನೀಗ ಮನೆಯಲ್ಲಿ ಅಮ್ಮ ಬಳಿಸಿದ ಹಬ್ಬದ ಊಟವನ್ನು ಉಣ್ಣುತ್ತಿರಬೇಕಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ನಾನು ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಮನೆ ಕಡೆ ಸವಾರಿ ಬೆಳೆಸುತ್ತೇನೆ. ಹಬ್ಬ ಇಲ್ಲದಿದ್ದರೂ ತಿಂಗಳಿಗೊಮ್ಮೆ ಹೋಗುವುದು ಇದ್ದದ್ದೇ. ಆದರೆ ಈ ಬಾರಿ ಯಾಕೋ ಹಬ್ಬ ಬಂದಿದ್ದರೂ, ಮನೆ ಕಡೆ ಹೋಗದೆ ತಿಂಗಳಾಗಿದ್ದರೂ ಮೈಸೂರಲ್ಲೇ ಇರೋಣ ಅನಿಸಿತ್ತು. ಯಾಕೆಂದರೆ ಈಗ ನನ್ನದು ಅಂತಿಮ ಸೆಮೆಸ್ಟರ್. ಇರುವುದಿನ್ನು ಅಬ್ಬಬ್ಬಾ ಅಂದರೆ ಎರಡು-ಎರಡೂವರೆ ತಿಂಗಳು. ಈ ಹಿನ್ನೆಲೆಯಲ್ಲಿ ಮುಂದಿನ ಉದ್ಯೋಗಕ್ಕಾಗಿ ಈಗಲೇ ತಯಾರಾಗಬೇಕು. ಆದ್ದರಿಂದ ಮನೆಗೆ ಹೋಗಿ ನಾಲ್ಕೈದು ದಿನ ಹಾಳು ಮಾಡುವುದು ಬೇಡ, ಅಲ್ಲಿ ಮಾಡುವುದನ್ನು ಇಲ್ಲೇ ಮಾಡೋಣ(!!) ಅಂತ ಸುಮ್ಮನಿದ್ದೆ.

ಅಂದ ಹಾಗೆ ಈ ಹಬ್ಬದ ಕಾರಣದಿಂದ ಊಟದ ಮೆಸ್ ಇನ್ನೆರಡು ದಿನ ಇರುವುದಿಲ್ಲ ಅಂತ ಮೆಸ್ ಆಂಟಿ ನಿನ್ನೆಯೇ ಹೇಳಿದ್ದರು. 'ಸರಿ ಆಂಟಿ' ಅಂತಂದು ಬಂದಿದ್ದೆ. ಇಂದು ಬೆಳಗ್ಗೆ ಹತ್ತಿರದ ಹೋಟೆಲಿಗೆ ಹೋಗಿ ತಿಂಡಿ ತಿಂದು, ಪೇಟೆಗೊಮ್ಮೆ ಸುಮ್ಮನೆ ಹೋಗಿ ಈಗ್ಗೆ ಸ್ವಲ್ಪ ಸಮಯಕ್ಕೆ ಮುಂಚೆ ಅಂದರೆ ಸುಮಾರು ಎರಡು ಗಂಟೆಗೆ ವಾಪಸ್ ಬಂದೆ. ತುಂಬಾ ಹಸಿವಾಗುತ್ತಿತ್ತು. ಉಂಡು ಬರೋಣ ಅಂತ ಹೋಟೆಲಿಗೆ ಹೋದರೆ ಹೋಟೆಲ್ ಮುಚ್ಚಿತ್ತು. ಪಕ್ಕದ ಅಂಗಡಿಯವರನ್ನು ಕೇಳಿದರೆ 'ಹಬ್ಬ ಆಲ್ವಾ ಸಾರ್' ಅಂದರು. ಮತ್ತೊಂದು ಹೋಟೆಲಿಗೆ ಹೋದೆ. ಆ ಹೋಟೆಲಿಗೂ ಹಬ್ಬವಂತೆ! ಇನ್ನು ಉಳಿದಿರುವುದು ಒಂದೇ ಹೋಟೆಲ್. ಅದೂ ಮುಚ್ಚಿದ್ದರೆ ಮತ್ತೆ ಸನಿಹದಲ್ಲೆಲ್ಲೂ ಹೋಟೆಲಿಲ್ಲ. ದೇವರೇ ಅಂದುಕೊಳ್ಳುತ್ತಾ ಆ ಹೋಟೆಲಿಗೆ ನಡೆದೆ. ಹಸಿವು ಬೇರೆ ಸಿಕ್ಕಾಪಟ್ಟೆ. ಹೋಗಿ ನೋಡಿದರೆ, ಸಧ್ಯ ಮುಚ್ಚಿರಲಿಲ್ಲ. ಜೀವ ಬಂದಂತಾಯಿತು. ಹೋಟೆಲಿನ ಒಳಗೆ ಹೋಗಿ ನೋಡುತ್ತೇನೆ; ಸಪ್ಲಾಯರ್ ಖುರ್ಚಿಗಳನ್ನು ಜೋಡಿಸಿಡುತ್ತಿದ್ದ!

ಹಸಿವು ತಡೆಯಲಾಗುತ್ತಿರಲಿಲ್ಲ, ದೂರದ ಬೇರೆ ಹೋಟೆಲಿಗೆ ಹೋಗುವುದು ಬದಿಗಿರಲಿ; ಹಸಿವಿನಲ್ಲಿ ಎಲ್ಲಿ ಕುಸಿದು ಬೀಳುತ್ತೇನೋ ಎಂಬಂತಾಗಿತ್ತು. ಎಷ್ಟರ ಮಟ್ಟಿಗೆ ಹಸಿವು ಕಾಡುತ್ತಿತ್ತು ಅಂದರೆ ಸಪ್ಲಾಯರ್ ನಲ್ಲಿ 'ಹಸಿವಾಗ್ತಿದೆ, ಊಟ ಕೊಡ್ತೀರಾ?' ಅಂತ ತೀರಾ ಭಿಕ್ಷುಕನಂತೆ ಕೇಳಿಕೊಂಡೆ. 'ಇಲ್ಲ ಸಾರ್ ಹಬ್ಬ ಆಲ್ವಾ? ಬೆಳಗ್ಗೆ ಓಪನ್ ಮಾಡಿದ್ವಿ ಈಗಿಲ್ಲ' ಅಂತ ಒಳ ನಡೆದ. ಮೊದಲ ಬಾರಿಗೆ ಹಬ್ಬಗಳ ಬಗೆಗೆ ತಾತ್ಸಾರ ಹುಟ್ಟಿತು!

ಬಾಳೆಹಣ್ಣು ತಿನ್ನೋಣ ಅಂದುಕೊಂಡೆ. ಊಹೂಂ, ಹಬ್ಬ ನೋಡಿ, ಅಂಗಡಿಗಳೂ ಮುಚ್ಚಿದ್ದವು! ಹಾಗೋ ಹೀಗೋ ರೂಮಿಗೆ ಬಂದು ಬಾಟಲಲ್ಲಿ ಉಳಿದಿದ್ದ ನಿನ್ನೆಯ ನೀರನ್ನು ಕುಡಿಯಲು ತಲೆಯೆತ್ತಿ ಬಾಯಿ ತೆರೆದರೆ, ಕಾಣಿಸಿದ್ದು ಕ್ಯಾಲೆಂಡರಿನಲ್ಲಿ ಕೆಂಪು ಅಕ್ಷರದಲ್ಲಿ ಬರೆದ 'ಯುಗಾದಿ'! ಹೇಗಾಗಬೇಡ ಹೇಳಿ?

ನೀರನ್ನು ಕುಡಿದಾಗ ಸ್ವಲ್ಪ ಜೀವ ಬಂದಂತಾಯಿತು. ಆದರೆ ಹಬ್ಬದ ಈ ಸಂಭ್ರಮವನ್ನು ನಿಮ್ಮೊಂದಿಗೆ ಈಗಲೇ, ಹಸಿದ ಹೊಟ್ಟೆಯ ಹಪಹಪಿಯಲ್ಲೇ ಹಂಚಿಕೊಳ್ಳಬೇಕೆನಿಸಿತು. ಹಾಗಾಗಿ ಪಕ್ಕದ ರೂಮಿನವನ ಇಂಟರ್ ನೆಟ್ಟಿನಲ್ಲಿ ಬರೆಯಲು ಕೂತಿದ್ದೇನೆ.

ಪ್ರಾಯಶಃ ರಾತ್ರಿ ಕೂಡಾ ಊಟ ಸಿಗಲಿಕ್ಕಿಲ್ಲ, ಯಾಕೆಂದ್ರೆ ಹಬ್ಬ ಆಲ್ವಾ?!

Read more...

ಈ ಕಾಯ್ಕಿಣಿ ಖಾಲಿಯಾಗುವುದೇ ಇಲ್ಲವಾ ಅಂತ...

>> Thursday, March 26, 2009

ಅನಿಸುತಿದೆ ಯಾಕೋ ಇಂದು

ನೀನೇನೆ ನನ್ನವಳೆಂದು...

'ಮಂಗಾರು ಮಳೆ' ಸಿನಿಮಾದ ಈ ಹಾಡು ಅದೆಷ್ಟು ಪ್ರಖ್ಯಾತಿ ಪಡೆಯಿತೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಪ್ರತಿಯೊಬ್ಬರ ಬಾಯಲ್ಲೂ 'ಅನಿಸುತಿದೆ..'ಯದೇ ಅನುರಣನೆ. ಈಗಲೂ ಗುನುಗುವಿಕೆ ನಿಂತು ಹೋಗಿಲ್ಲ. ಯಾರಿಗಾದರೂ ಕರೆ ಮಾಡಿದರೆ ಕೇಳಿಸುವುದು ರಿಂಗ್ ಟೋನಲ್ಲ, ಅನಿಸುತಿದೆ.. ಹಾಡು!

ವಿಷಯ ಅದಲ್ಲ, ಈ ಹಾಡನ್ನು ಬರೆದ ಜಯಂತ ಕಾಯ್ಕಿಣಿ ಇದ್ದಾರಲ್ಲ, ಅವರ ಕಲ್ಪನೆ ಅದೆಷ್ಟು ಸೊಗಸಾಗಿದೆಯೆಂಬುದು! ಅಂದು ಹಾಡು ಬರೆಯಲು ಕೂತ ಕಾಯ್ಕಿಣಿ ಇನ್ನೂ ಅದ್ಭುತ ಅನ್ನಿಸುವಂತಹ ಹಾಡುಗಳನ್ನು ನೀಡುತ್ತಲೇ ಇದ್ದಾರಲ್ಲಾ ಅನ್ನುವುದು!

ನೀವೇ ನೋಡಿ, ಮುಂಗಾರು ಮಳೆಯ ಆ ಹಾಡು ಬಂದ ಕೆಲವೇ ದಿನಗಳಲ್ಲಿ 'ಈ ಸಂಜೆ ಯಾಕಾಗಿದೆ... ನೀನಿಲ್ಲದೇ..' ಅನ್ನುವ ನವಿರಾದ ಹಾಡು ಬರೆದರು ಕಾಯ್ಕಿಣಿ. ಅದರ ಗುಂಗು ಮುಗಿಯಿತೆನ್ನುವಷ್ಟರಲ್ಲಿ 'ಮಿಂಚಾಗಿ ನೀನು ಬರಲು...' ಅಂದುಬಿಟ್ಟರು. ಅದರ ಛಾಯೆಯಿಂದ ಹೊರಬಂದೆವೆನ್ನುವಷ್ಟರಲ್ಲಿ 'ನಿನ್ನಿಂದಲೇ...ನಿನ್ನಿಂದಲೇ.. ಕನಸೊಂದು ಶುರುವಾಗಿದೆ...' ಅನ್ನುವ ಮತ್ತೊಂದು ಅಮೋಘ ಹಾಡನ್ನು ತಯಾರಿಸಿಬಿಟ್ಟರು ಜಯಂತ ಕಾಯ್ಕಿಣಿ. ಅವರ ಸೂಪರ್ ಹಿಟ್ ಹಾಡುಗಳ ಭರಾಟೆ ಅಲ್ಲಿಗೂ ಮುಗಿಯಲಿಲ್ಲ. ಅದೆಲ್ಲಾ ಯಾಕೆ? ಮೊನ್ನೆ ಮೊನ್ನೆ ಬಂದ 'ಹಾಗೇ ಸುಮ್ಮನೇ' ಸಿನಿಮಾದ ಅಷ್ಟೂ ಹಾಡುಗಳನ್ನು ಅವರೇ ಬರೆದು ಸೋಜಿಗ ಸೃಷ್ಟಿಸಿದ್ದಾರೆ. ಅಚ್ಚರಿಯೆಂದರೆ ಎಲ್ಲವೂ ಮತ್ತೆ ಮತ್ತೆ ಗುನುಗುವಂಥ ಹಾಡುಗಳೇ! ಇಷ್ಟು ಸಾಲದ್ದಕ್ಕೆ ಈಗ ಬಂದ 'ಜಂಗ್ಲಿ' ಸಿನಿಮಾದಲ್ಲೂ 'ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ...' ಎಂಬ ಭಲೇ ಹಾಡನ್ನು ರಚಿಸಿ ಯುವಕ-ಯುವತಿಯರೆದೆಯಲ್ಲಿ ಸಂಚಲನ ತಂದಿದ್ದಾರೆ.

ಇಲ್ಲಿ ಹೇಳಿರುವ ಹಾಡುಗಳೆಲ್ಲಾ ಕೇವಲ ಉದಾಹರಣೆಗಳು ಅಷ್ಟೆ. ಇಲ್ಲಿ ಹೇಳದ, ಆದರೆ ಮರಮರಳಿ ಗುನುಗುವಂತಹ ಇನ್ನೂ ಅದೆಷ್ಟೋ ಹಾಡುಗಳನ್ನು ಸಿನಿಮಾ ಜಗತ್ತಿಗೆ ಈಗಾಗಲೇ ನೀಡಿದ್ದಾರೆ ಕಾಯ್ಕಿಣಿ. ಹಾಗಂತ ಆ ಮನುಷ್ಯ ಬಳಲಿಲ್ಲ, ಬರೆಯುತ್ತಲೇ ಇದ್ದಾರೆ!

ಅಲ್ಲ, ಒಬ್ಬ ಮನುಷ್ಯನಿಗೆ ಈ ಪರಿ ಹೃದಯದ ಕಪಾಟಿನೊಳಗೆ ನುಗ್ಗಿ ಬೆಚ್ಚಗೆ ಕೂರಬಲ್ಲ ಹಾಡುಗಳನ್ನು ಪದೇ ಪದೇ ಬರೆಯುವುದಕ್ಕೆ ಸಾಧ್ಯವಾ ಅಂತ?

ಏನೇ ಹೇಳಿ. ಈ ಜಯಂತ ಕಾಯ್ಕಿಣಿ ತುಸು ಮೊದಲೇ ಸಿನಿಮಾ ಜಗತ್ತಿಗೆ ಅಡಿಯಿಟ್ಟಿರುತ್ತಿದ್ದರೆ ಇನ್ನೂ ಅದೆಷ್ಟೋ 'ಅನಿಸುತಿದೆ..'ಗಳನ್ನು ನಾವು ಈಗಾಗಲೇ ಕೇಳಬಹುದಿತ್ತು ಅನಿಸುತ್ತಿದೆ!

ಏನಂತೀರಿ?

Read more...

ಕಾಡುವ ಕನವರಿಕೆ

ಜ್ಞಾಪಕ ಶಾಲೆಯ ತುಂಬಾ ತುಂಬಾ
ಚೆಲುವಿನ ಚಿತ್ರಗಳು
ನಿನ್ನಯ ಕನಸೇ ನನ್ನಯ ಬದುಕಿನ
ಹಗಲೂ ರಾತ್ರಿಗಳು

ಒಲವಿನ ಗೆಳತಿಯೆ ಕಾಡುವೆ ಮತ್ತೆ
ಮತ್ತೆ ಮತ್ತೆನಗೆ
ಪಶ್ಚಿಮದೂರಿಗೆ ರವಿ ಜಾರುವ ಹಾಗೆ
ನಾನೂ ನಿನ್ನೆಡೆಗೆ

ಆದರೆ ಎಂತು ಹೇಳುವುದಿಂತು
ಅರಿಯೆನು ಹೊಸದಾರಿ
ಮನಸಿನ ಮಂಟಪದೊಳಗಡೆ ಮಾತ್ರ
ನನ್ನದೆ ಜಯಭೇರಿ!

ಎದೆಗೂಡಲ್ಲಿ ಬಚ್ಚಿಟ್ಟಿರುವ
ಪ್ರೇಮವು ತಿಳಿದೀತೇ?
ಅರಳಲು ಬಾರದ ಮಲ್ಲಿಗೆ ಹೂವು
ಪರಿಮಳ ಬೀರೀತೇ?

ಸ್ನೇಹದ ಬಂಧ ಕಿತ್ತರೆ ಮತ್ತೆ
ಪ್ರೀತಿಯ ಭರದಲ್ಲಿ
ಜೀವಿಸಬಲ್ಲೆನೆ ಎರಡನೂ ಕಳೆದು
ಈ ಬರಿ ಧರೆಯಲ್ಲಿ

ಬದುಕೇ ಹೀಗೆ ಉತ್ತರವಿಲ್ಲದೆ
ಉಳಿಯುವ ಪ್ರಶ್ನೆಗಳು
ಕನವರಿಕೆಯಲೇ ಕಳೆದು ಹೋಗುವ
ಇಂದೂ - ನಾಳೆಗಳು!

Read more...

ಕಲಾವಿದರ ಕತೆ

>> Wednesday, March 18, 2009

೧) 'ಯಕ್ಷರಾಜ' ಚಿಟ್ಟಾಣಿ ರಾಮಚಂದ್ರ ಹೆಗಡೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ವಯಸ್ಸು ಎಪ್ಪತ್ತೈದು ಕಳೆಯುತ್ತಿದ್ದರೂ, ಇಂದಿಗೂ ರಂಗದ ಮೇಲಿನ ಅವರ ಹಾವ ಭಾವ, ಅಭಿನಯ, ಕುಣಿತ.. ಬಿಡಿ, ಅಂಥಾ ಕಲಾವಿದ ಸಿಕ್ಕುವುದು ಶತಮಾನಕ್ಕೊಮ್ಮೆ!
ವಿಷ್ಯ ಅದಲ್ಲ. ಇಂಥಾ ಚಿಟ್ಟಾಣಿಗೆ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಒಂದು ಲವ್ ಇತ್ತಂತೆ!! ಹಾಂ, ಇದು ಗಾಸಿಪ್ ಅಲ್ಲ. ಹಾಗಂತ ಅವರ ಆತ್ಮಕಥನ 'ನಿಮ್ಮ ಚಿಟ್ಟಾಣಿ' ಯಲ್ಲಿದೆ. ಸಾವಿತ್ರಿ ಅನ್ನುವ ಹುಡುಗಿ (ಈಗ ಹುಡುಗಿ ಅಲ್ಲ!!) ಮತ್ತು ಚಿಟ್ಟಾಣಿ ನಡುವೆ 'ಅದು' ಹುಟ್ಟಿಕೊಂಡಿತ್ತಂತೆ.
'ಅವಳು ನನ್ನ ಹಗಲು ವೇಷ ನೋಡಿ ಮೆಚ್ಚಿಕೊಂಡಳೋ ಅಲ್ಲ ರಾತ್ರಿ ವೇಷ ನೋಡಿ ಮೆಚ್ಚಿಕೊಂಡಳೋ ಅಂತ ಗೊತ್ತಿಲ್ಲ!' ಎಂದು ಚಿಟ್ಟಾಣಿ ಹೇಳುತ್ತಾರೆ. ತಮಾಷೆ ಅಂದ್ರೆ ಚಿಟ್ಟಾಣಿ ಆ ಕಾಲದಲ್ಲಿ ತನ್ನ ಪ್ರೇಯಸಿಗೆ ಪ್ರೇಮ ಪತ್ರ ಬರೆದಿದ್ದರಂತೆ!! ಆಕೆಯನ್ನು ಅವರು ಪ್ರೀತಿಯಿಂದ 'ಸವಿ' ಅಂತ ಕರೆಯುತ್ತಿದ್ದರಂತೆ!
ಆದರೆ ಏನು ಮಾಡೋಣ ಹೇಳಿ? ಅಂದಿನ ಕಾಲದಲ್ಲಿ ಮನೆಯವರು ಹೇಳಿದ ಹುಡುಗಿಯನ್ನೇ ಮದುವೆಯಾಗುವುದು ಕಡ್ಡಾಯವಾಗಿತ್ತು. ಆದ್ದರಿಂದಲೇ 'ಮುಂಗಾರು ಮಳೆ' ಸಿನಿಮಾದಂತೆ 'ಪ್ರೀತಿ ಮಧುರ ತ್ಯಾಗ ಅಮರ' ಅಂತ ಪ್ರೀತಿಯನ್ನು ಬಿಟ್ಟುಬಿಡಬೇಕಾಯಿತಂತೆ. ಛೆ!
ಅಂದ ಹಾಗೆ ಇತ್ತೀಚೆಗೆ ಚಿಟ್ಟಾಣಿ ಮೈಸೂರಲ್ಲಿ ಸಿಗಬೇಕಾ? ಅವರನ್ನು ಕೇಳಿದೆ. 'ಅಕಸ್ಮಾತ್ ಈಗ ನಿಮ್ಮ ಮುಂದೆ ಆ ನಿಮ್ಮ 'ಸವಿ' ಬಂದು ಕುಳಿತರೆ ನಿಮ್ಮ ಅಭಿನಯ ಹೇಗಿದ್ದೀತು?' ಅಂತ. ಇಳಿ ವಯಸ್ಕ ಚಿಟ್ಟಾಣಿ ನಾಚುತ್ತಾ ಹೇಳಿದ್ದೇನು ಅಂತೀರಾ? 'ಈಗಲೂ ಅವ್ಳು ಬಂದು ಕೂತರೆ ಅಭಿನಯ ಸ್ವಲ್ಪ ಏರು ಪೇರಾದೀತು. ಗಮನ ಸ್ವಲ್ಪ ಅಲ್ಲಿಗೇ ಹೋದೀತು!!'
ನನ್ನ ಅನುಮಾನ ಅಂದ್ರೆ, ಚಿಟ್ಟಾಣಿಯವರ ಶೃಂಗಾರ ರಸದ ಕುಣಿತದ ಹಿಂದೆ 'ಸವಿ ಸವಿ' ನೆನಪು ಇರಬಹುದಾ ಅಂತ?!




೨) ಅದು ಮಂಗಳೂರಿನ ಟವುನ್ ಹಾಲ್ ನಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ. ರಾವಣನಾಗಿ ಅರ್ಥ ಹೇಳಲು ಕುಳಿತವರು ಮತ್ತಿನ್ಯಾರು? ಅದ್ಭುತ ಅರ್ಥಧಾರಿ ಶೇಣಿ ಗೋಪಾಲಕೃಷ್ಣ ಭಟ್. ಅವರು ಪೀಠಿಕೆ ಶುರುವಿಟ್ಟರು. ಶೇಣಿ ಅರ್ಥ ವೈಭವಕ್ಕೆ ಜನ ಮರುಳಾಗಿ ಬಿಟ್ಟಿದ್ದರು. ಅದರಲ್ಲೂ ಮೇಲಿನ ಅಂತಸ್ತಿನಲ್ಲಿ ಕೂತಿದ್ದ ಜನ ಆಗಾಗ ಭಾರೀ ಚಪ್ಪಾಳೆ ತಟ್ಟುತ್ತಿದ್ದರು. ಹಾಗೆ ಅವರು ಪದೇ ಪದೇ ಚಪ್ಪಾಳೆ ತಟ್ಟುತ್ತಿದ್ದುದು ಶೇಣಿಯವರಿಗೆ ಕಿರಿ ಕಿರಿ ತಂತು. ಅವರು ಕೂಡಲೇ ಆ ಮೇಲಿನ ಅಂತಸ್ತಿನ ಜನರೆಡೆಗೆ ಕೈ ತೋರಿಸಿ ಅಂದಿದ್ದೇನು ಗೊತ್ತಾ?
"ಏನು? ರಾಮನ ಕಪಿ ಸೇನೆ ಬಂದೂ ಬಂದು ಬಂದು ಇಲ್ಲಿವರೆಗೂ ಬಂತಾ? ಛೆ, ಛೆ, ಛೇ....ಇನ್ನು ನಾವು ತಡ ಮಾಡುವಂತಿಲ್ಲ. "

ಮತ್ತೆ ಚಪ್ಪಾಳೆ ಬೀಳಲಿಲ್ಲ!!

Read more...

ಈಗಿನವರು ಪ್ರೇಮ ಪತ್ರವನ್ನೂ ಬರೆಯುವುದಿಲ್ಲ, ಛೆ!

>> Tuesday, March 17, 2009

ಪ್ರೀತಿಯ ಅಮ್ಮ,
ಬೇಡುವ ಆಶೀರ್ವಾದಗಳು. ಹೇಗಿದ್ದೀಯಾ? ಚೆನ್ನಾಗಿದ್ದಿ ತಾನೆ? ಅಪ್ಪ, ಅಣ್ಣ, ಎಲ್ಲರೂ ಕುಶಲವಷ್ಟೇ? ನಾನಂತೂ ತುಂಬಾ ಆರಾಮ.

ಹಾಂ, ಅಮ್ಮ,.. ಮೊನ್ನೆ ನಮಗೆ ಪರೀಕ್ಷೆಯಿತ್ತು. ಪರವಾಗಿಲ್ಲ ಪಾಸಾದೇನು! ಅಂದ ಹಾಗೆ ಅಮ್ಮ, ಇನ್ನೆರಡು ವಾರ ಕಳೆದರೆ ನಮಗೆ ರಜ ಸಿಗುತ್ತದೆ. ಮತ್ತೆ ಮನೆಗೆ ಬಂದು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸಬಹುದು...

ಅಮ್ಮ, ಆ ಎಮ್ಮೆ ಈಗ ನೆಟ್ಟಗೆ ಕರೆಯಲು ಬಿಡುತ್ತದೆಯೋ ಇಲ್ಲವೋ? ಮತ್ತೆ ದನ ಕರುಗಳು, ಹಗಲಿರುಳೂ ಸುಮ್ಮನೇ ತಲೆಹರಟೆ ಮಾಡುವ ನಾಯಿ, ಇಲಿಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಂಡಿರುವ ಬೆಕ್ಕು...ಎಲ್ಲವೂ ಏನು ಮಾಡುತ್ತಿವೆ? ಬಂದಾಗ ಎಲ್ಲದರ ಹಣೆಗೂ ಮುತ್ತುಕೊಟ್ಟು ಮುದ್ದಾಡಬೇಕು ನಾನು.

ಸರಿ ಅಮ್ಮ, ಬೇರೇನೂ ವಿಶೇಷವಿಲ್ಲ. ಇಂದಿನಿಂದ ಹದಿನೈದನೇ ದಿನಕ್ಕೆ ಮನೆಯಲ್ಲಿರುತ್ತೇನೆ. ಅಲ್ಲಿಯವರೆಗೆ ನಿನ್ನದೇ ನೆನಪುಗಳು...
ಪ್ರೀತಿಯಿಂದ,

..... ಹೀಗೆಲ್ಲಾ ಪತ್ರ ಬರೆಯುವ ಪರಿಪಾಠ ನಿಂತು ಹೋಗಿ ವರುಷಗಳೇ ಕಳೆದುಹೋಗಿವೆ. ಪತ್ರದ ಜಾಗದಲ್ಲಿ ಮೊಬೈಲ್ ಬಂದು ಅಡ್ಡಡ್ಡ ಮಲಗಿಬಿಟ್ಟಿದೆ. ಆದ್ದರಿಂದಲೇ ಇಂದು ಪತ್ರ ಅಂದ ಕೂಡಲೇ ಮೂಗುಮುರಿಯುವ, ಆ..ಕಳಿಸುವ ಹಂತಕ್ಕೆ ಬಂದುಬಿಟ್ಟಿದ್ದೇವೆ. ನಿಜ, ಮೊಬೈಲ್ ಅಥವಾ ಸ್ಥಿರ ದೂರವಾಣಿಗಳು ನಮ್ಮ ಸಂಪರ್ಕ ಸಾಧ್ಯತೆಯನ್ನು ಇನ್ನಷ್ಟು ಸರಳಗೊಳಿಸಿವೆ. ಶೀಘ್ರ ಸಂವಹನವನ್ನು ಸಾಕಾರಗೊಳಿಸಿವೆ. ಈ ದಿನದ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುತ್ತಿವೆ. ಆದರೆ ಸ್ನೇಹಿತರೇ, ಇವೆಲ್ಲದರ ಭರದಲ್ಲಿ ಇದೇ ಮೊಬೈಲ್, ಸ್ಥಿರ ದೂರವಾಣಿಗಳು ನಮ್ಮ ಸಣ್ಣ ಸಣ್ಣ ಸಂವೇದನೆಗಳನ್ನೂ ಹಿಸುಕಿ ಹಾಕುತ್ತಿವೆ ಎಂಬುದನ್ನು ಮರೆಯಬಾರದು!

ನೀವೇ ಗಮನಿಸಿ ನೋಡಿ. ಒಂದು ಪತ್ರ ಬರೆಯುವಾಗ ನಮ್ಮ ನೆನಪು, ಕನಸು, ಕನವರಿಕೆ, ಆಶಯ, ಅಭಿಪ್ರಾಯ, ಕೀಟಲೆ, ತುಂಟತನ, ಪ್ರೀತಿ, ಮಮತೆ, ಕಕ್ಕುಲಾತಿ, ಕಾಳಜಿ... ಹೀಗೆ ಎಲ್ಲವೂ ಸಾಕ್ಷಾತ್ಕಾರಗೊಳ್ಳುತ್ತವೆ. ಸಣ್ಣಪುಟ್ಟ ವಿಷಯಗಳ ಕುರಿತೂ ಗಮನ ಹರಿಸಲು ಪತ್ರದಲ್ಲಿ ಮಾತ್ರ ಸಾಧ್ಯ. ಅದೇ ಮೊಬೈಲ್ ನಲ್ಲಿ ಮಾತನಾಡುವಾಗ ಗಮನವೆಲ್ಲಾ ಕರಗುತ್ತಿರುವ ಕರೆನ್ಸಿ ಕಡೆಗೇ! ಆದ್ದರಿಂದಲೇ ಮೊಬೈಲ್ ಸಂವಹನದಲ್ಲಿ ನಮಗೆ ವ್ಯವಹಾರವನ್ನು ಬಿಟ್ಟು ಬೇರೆ ಮಾತನಾಡುವುದಕ್ಕೇ ಆಗುವುದಿಲ್ಲ. ಮನೆಯ ದನ ಕರುಗಳು, ಬೆಕ್ಕುಗಳೆಲ್ಲಾ ಇಲ್ಲಿ ಬಂದು ಹೋಗುವುದೇ ಇಲ್ಲ!

ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ ಯಾವತ್ತೂ ಮೊಬೈಲ್ ಮಾತುಕತೆ ಪತ್ರದಷ್ಟು ಆಪ್ತವಾಗುವುದೇ ಇಲ್ಲ ಅನ್ನುವುದು. ಯಾಕೆಂದರೆ ಪತ್ರದಲ್ಲಿ ಬರೆಯಲ್ಪಟ್ಟ ಅಷ್ಟೂ ಪದಗಳು ಭಾವನೆಗಳ ಕೊಳದಲ್ಲಿ ಮಿಂದೆದ್ದು ಬಂದಿರುತ್ತವೆ. ಆದ್ದರಿಂದಲೇ ಪತ್ರಗಳು ನೇರವಾಗಿ ಹೃದಯದ ಕಪಾಟಿನೊಳಗೆ ನುಗ್ಗಿ ಕದ ಹಾಕಿಕೊಳ್ಳುತ್ತವೆ ಮತ್ತು ಅಲ್ಲೇ ಭದ್ರವಾಗಿರುತ್ತವೆ. 'ಬೇಡುವ ಆಶೀರ್ವಾದಗಳು', 'ಅಜ್ಜ ಹೇಗಿದ್ದಾರೆ?', 'ಪಕ್ಕದ್ಮನೆ ನಾರಾಯಣ ಏನು ಮಾಡುತ್ತಿದ್ದಾನೆ?', 'ಆ ಗಿರಿಜಳಿಗೆ ಮದುವೆ ಆಯಿತಾ?' 'ಪೇಪರ್ ಅಂಗಡಿ ಮಹೇಶನಿಗೆ ಆರೋಗ್ಯ ಸುಧಾರಿಸಿತಾ?'... ಇಂತಹ ಅದೆಷ್ಟೋ ವಾಕ್ಯಗಳು (ಮಾತುಗಳು) ಪತ್ರದಲ್ಲಿ ಮಾತ್ರ ಮೂಡಿಬರಲು ಸಾಧ್ಯ ಮತ್ತು ಅದನ್ನೇ ನಾನು ಸಂವೇದನೆ ಹಾಗೂ ಸಂಸ್ಕೃತಿ ಅನ್ನುತ್ತಿರುವುದು.

ಪತ್ರದ ಇನ್ನೊಂದು ಬಹುದೊಡ್ಡ ಗುಣವೆಂದರೆ, ಪತ್ರಗಳನ್ನು ವರುಷಗಳ ನಂತರವೂ ಓದಿ ಖುಷಿಪಡಬಹುದು. ಪತ್ರಗಳೆಂದರೆ ನುಡಿಚಿತ್ರಗಳಂತೆ. ಅವು ಸದಾ ನಳನಳಿಸುತ್ತಲೇ ಇರುತ್ತವೆ. ಮಾತ್ರವಲ್ಲ, ಸಂತೋಷವನ್ನು ಮೊಗೆಮೊಗೆದು ನೀಡುತ್ತಲೇ ಇರುತ್ತವೆ. ಸುಮ್ಮನೇ ಒಮ್ಮೆ ಮನೆಯಲ್ಲಿ ತಡಕಾಡಿ. ಯಾವತ್ತೋ ಒಂದು ದಿನ ಯಾರೋ ಬರೆದ ಪತ್ರ ಸಿಕ್ಕರೂ ಸಿಗಬಹುದು. ಆ ಪತ್ರ ಈವತ್ತೂ ಎಷ್ಟು ಸಂಭ್ರಮ ತಂದೀಯುತ್ತದೆ ನೋಡಿ.

ಅದೂ ಅಲ್ಲದೆ ಕೆಲವನ್ನು ಮಾತಿನಲ್ಲಿ ಹೇಳಲಾಗುವುದೇ ಇಲ್ಲ. ಹಾಗೆ ಮಾತು ಮೌನವಾದಾಗ ನೆರವಿಗೆ ಬರುವುದು ಈ ಅಕ್ಷರ ಸರಸ್ವತಿಯೇ! ಮುಖಕ್ಕೆ ಮುಖ ಕೊಟ್ಟು ಹೇಳಲಾಗದ್ದನ್ನೂ ಹೇಳುವ ತಾಕತ್ತಿರುವುದು ಅದು ಅಕ್ಷರಗಳಿಗೆ ಮಾತ್ರ. ಅಂತಹ ಅದ್ಭುತ ಕಲೆಯೇ ಇಂದು ಕಣ್ಮರೆಯಾಗುತ್ತಿದೆ.

ಇಂದು ಯಾರನ್ನೇ ಬೇಕಾದರೂ ಕೇಳಿ ನೋಡಿ. ಬೇಕಾದರೆ ಪದವಿ, ಸ್ನಾತಕೋತ್ತರ ಪದವಿ ಓದಿದವರನ್ನೇ ಗಮನಿಸಿ ನೋಡಿ. ಇವರೆಲ್ಲಾ ಬೇಕಾದರೆ ಉದ್ಯೋಗಕ್ಕೆ ಪುಟಗಟ್ಟಳೆ ಅರ್ಜಿ ಬರೆಯಬಲ್ಲರು. ಆದರೆ ಅಜ್ಜಿಗೊಂದು ಪತ್ರ ಬರೆಯಲಾರರು! ಪತ್ರವನ್ನು ಆರಂಭಿಸುವುದು ಹೇಗಂತಲೇ ಬಹುತೇಕ ಮಂದಿಗೆ ಗೊತ್ತಿಲ್ಲ.

ಅಣ್ಣ ತಂಗಿಗೆ ಬರೆಯುತ್ತಿದ್ದ ಕಿವಿ ಹಿಂಡುವಂತಹ ಪತ್ರ, ಮಗ ಅಪ್ಪನಿಗೆ ಬರೆಯುತ್ತಿದ್ದ ಮಿಶ್ರಭಯಭರಿತ ಪತ್ರ, ಮೊಮ್ಮಗ ಅಜ್ಜನಿಗೆ ಬರೆಯುತ್ತಿದ್ದ ಮುಗ್ಧ ಪತ್ರ, ಅಳಿಯ ಮಾವನಿಗೆ ಬರೆಯುತ್ತಿದ್ದ ಗೌರವ ಸಹಿತ ಪತ್ರ, ಸ್ನೇಹಿತರು ಬರೆದುಕೊಳ್ಳುತ್ತಿದ್ದ ತುಂಟ ಪತ್ರ.... ಹೀಗೆ ಬರೆಯುತ್ತಿದ್ದ ಪಾತ್ರಗಳೆಲ್ಲಾ ಈಗ ಎಲ್ಲೋ ಕಾಣೆಯಾಗಿಹೋಗಿವೆ. ಅಷ್ಟೆಲ್ಲಾ ಯಾಕೆ? ಈಗಿನ ಹುಡುಗ ಹುಡುಗಿಯರು ಪ್ರೇಮ ಪತ್ರವನ್ನೂ ಬರೆಯುವುದಿಲ್ಲ!

ಸ್ನೇಹಿತರೇ, ಸುಮ್ಮನೇ ಬರುವ ಮೊಬೈಲ್ ಸಂದೇಶಗಳನ್ನೇ ಪೆಟ್ಟಿಗೆಯಲ್ಲಿ ಚಿನ್ನ ಇಡುವಂತೆ ಇಟ್ಟುಕೊಂಡು ದಿನಾ ಬೆಳಗ್ಗೆದ್ದು ನೋಡಿ ತುಸು ನಗುವವರು ನಾವು. ಅಂಥಾದ್ದರಲ್ಲಿ ಪತ್ರವೊಂದು ಬಂದರೆ ಅದೆಷ್ಟು ಮುದನೀಡಲಿಕ್ಕಿಲ್ಲ? ಯೋಚಿಸಿ ನೋಡಿ. ಹಾಗೆಯೇ ಯಾರಿಗಾದರೂ ಸುಮ್ಮನೇ ಒಮ್ಮೆ ಪತ್ರ ಬರೆಯುವ ಬಗ್ಗೆಯೂ ಯೋಚನೆ ಮಾಡಿ.

Read more...

ನನ್ನಪ್ಪ

>> Sunday, March 15, 2009

ನನ್ನಪ್ಪ
ಬಿಲ್ ಗೇಟ್ಸ್ ಅಲ್ಲ; ಅವನಪ್ಪನ ಹಾಗೆ!
ಸಾದಾ ಮನುಷ್ಯ.

ನನ್ನಪ್ಪ,
ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ
ಡಾಕ್ಟರ್, ಆಫೀಸರ್.. ಏನೂ ಅಲ್ಲ
ಆದ್ದರಿಂದಲೇ...
ಮಗುವಾಗಿದ್ದಾಗ
ಅಪ್ಪನ ಹೆಗಲಲ್ಲಿ ಕೂತು
ಊರು ಸುತ್ತುವ ಸೌಭಾಗ್ಯ ತಪ್ಪಲಿಲ್ಲ!

ನಾನು ಸಣ್ಣವನಿದ್ದಾಗ,
ಕೆಸರುಗದ್ದೆಯಲ್ಲಿ ಆಡಿ ಬಂದಾಗ,
ಚಿಣ್ಣಿದಾಂಡು ಹಿಡಿದು ನಿಂತಾಗ,
ಅನುದಿನವೂ ಬ್ಯಾಟ್ ಬೀಸಿದಾಗ,
ಮನೆಯ ಗೋಡೆಗೆ ಚೆಂಡು ಎಸೆದಾಗ,
'ರಾಜು' ನಾಯಿ ಜೊತೆ ಹೊದ್ದು ಮಲಗಿದಾಗ
ಗದರಲಿಲ್ಲ, ಬಡಿಯಲಿಲ್ಲ
ನನ್ನಪ್ಪ,
ನನ್ನ ಬಾಲ್ಯ ಕಸಿಯಲಿಲ್ಲ!

ನನ್ನಪ್ಪ,
ಹಣ ಮಾಡುವ ಕಲೆ ಕಲಿಸಲಿಲ್ಲ
ಏಕೆಂದರೆ...
ಅವನಿಗೇ ಹಣ ಮಾಡುವುದು ಗೊತ್ತಿಲ್ಲ!
ಆದರೆ...
ಮಮತೆ-ವಾತ್ಸಲ್ಯಗಳನ್ನು ತುಂಬಿದ
ಪ್ರೀತಿಸುವುದನ್ನು ಕಲಿಸಿದ
ಅಪ್ಪ ನನ್ನನ್ನು
ಮನುಷ್ಯನನ್ನಾಗಿಸಿದ!

ನನ್ನಪ್ಪ,
ಸಾಮಾನ್ಯ ಕೃಷಿಕ.
ಹಾಗಂತ...
ಅಪ್ಪನ ಕೈ ಖಾಲಿಯಲ್ಲ.
ತೋಟದಿಂದ ಬರುವಾಗಲೂ ಹಣ್ಣು
ಪೇಟೆಯಿಂದ ಬರುವಾಗಲೂ ಹಣ್ಣು!
ಅಪ್ಪನ ಪ್ರೀತಿಯೇ ಹಾಗೆ
ಸಾಲ ಮಾಡಿಯಾದರೂ ಸರಿ;
ಮಗನನ್ನು ಖುಷಿಪಡಿಸುವ ಹಾಗೆ!

ಮಗ ದೊಡ್ಡವನಾದರೂ
ಅಪ್ಪನ ಪ್ರೀತಿ ಕಿರಿದಾಗಲಿಲ್ಲ.
ಮಗ ಮನೆಗೆ ಬಂದ ತಕ್ಷಣ
ಬಾದಾಮಿ ಬೀಜ, ಒಣದ್ರಾಕ್ಷಿ, ಕಿತ್ತಳೆ, ದಾಳಿಂಬೆ...
ಯಾವುದೂ ತಪ್ಪುವುದಿಲ್ಲ!

ಅಪ್ಪನಿಗೆ ಮಗ
ಈಗಲೂ ಸಣ್ಣವನೇ.
ಹೌದು...
ಇಂಥಾ ಅಪ್ಪನ ಮುಂದೆ
ಈ ಮಗ
ಯಾವಾಗಲೂ ಸಣ್ಣವನೇ!!

Read more...
Powered By Blogger